ಸುಧಾರಿತ ಭತ್ತದ ತಳಿಗಳು
ಕರ್ನಾಟಕ (ದಕ್ಷಿಣ ಮೈದಾನ ಪ್ರದೇಶ)
ಭತ್ತದ ತಳಿ ಅಬಿವೃದ್ಧಿ ವಿಭಾಗ
ವಲಯ ಕೃಷಿ ಸಂಶೋಧನಾ ಕೇಂದ್ರ
ವಿ.ಸಿ.ಫಾರಂ, ಮಂಡ್ಯ-571405
ಭತ್ತವು ಕರ್ನಾಟಕ ರಾಜ್ಯದ ನೀರಾವರಿ ಪ್ರದೇಶಗಳಲ್ಲಿ ಬೆಳೆಯಲಾಗುತ್ತಿರುವ ಒಂದು ಪ್ರಮುಖ ಆಹಾರ ಬೆಳೆ. ಅಚ್ಚುಕಟ್ಟು ಪ್ರದೇಶಗಳಲ್ಲಿ ಹೆಚ್ಚು ವಿಸ್ತೀರ್ಣವನ್ನು ಹೊಂದಿರುವ ಈ ಬೆಳೆಯನ್ನು ಕೆರೆ, ಬಾವಿ ಹಾಗೂ ಮಳೆ ಆಶ್ರಯಗಳಲ್ಲೂ ಕಾಣಬಹುದು. ರಾಜ್ಯದ ಸುಮಾರು 13.28 ಲಕ್ಷ ಹೆಕ್ಟೇರುಗಳಲ್ಲಿ ಮುಂಗಾರು, ಹಿಂಗಾರು ಮತ್ತು ಬೇಸಿಗೆ ಹಂಗಾಮುಗಳಲ್ಲಿ ಈ ಬೆಳೆಯನ್ನು ಬೆಳೆಯಲಾಗುತ್ತಿದ್ದು ವಾರ್ಷಿಕ ಸುಮಾರು 38.56 ಲಕ್ಷ ಟನ್ಗಳಷ್ಟು ಭತ್ತವನ್ನು ಉತ್ಪಾದನೆ ಮಾಡಲಾಗುತ್ತಿದೆ. ರಾಜ್ಯದ ದಕ್ಷಿಣ ಜಿಲ್ಲೆಗಳ ಮೈದಾನ ಪ್ರದೇಶಕ್ಕೆ ಬಿತ್ತನೆ ಕಾಲ, ನೀರಿನ ಲಭ್ಯತೆ, ಕೀಟ ಹಾಗೂ ರೋಗದ ತೀವ್ರತೆ ಮತ್ತು ಮಣ್ಣಿನ ಗುಣಲಕ್ಷಣಗಳನ್ನು ಗಮನದಲ್ಲಿಟ್ಟುಕೊಂಡು ಅಧಿಕ ಇಳುವರಿ ನೀಡುವ ಅನೇಕ ತಳಿಗಳು ಹಾಗೂ ಹೈಬ್ರಿಡ್ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಆದುದರಿಂದ ರೈತರು ಈ ಎಲ್ಲಾ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ತಮ್ಮ ಜಮೀನಿಗೆ ಸೂಕ್ತವಾದ ತಳಿಗಳನ್ನು ಆಯ್ಕೆ ಮಾಡಿಕೊಂಡು ಬೆಳೆಯುವುದರಿಂದ ಹೆಚ್ಚಿನ ಲಾಭ ಪಡೆಯಬಹುದು. ರಾಜ್ಯದ ದಕ್ಷಿಣ ಮೈದಾನ ಪ್ರದೇಶದ ವಿವಿಧ ಭಾಗಗಳಿಗೆ ಶಿಫಾರಸ್ಸು ಮಾಡಲಾಗಿರುವ ಅಧಿಕ ಇಳುವರಿ ನೀಡುವ ಪ್ರಮುಖ ಸುಧಾರಿತ ಭತ್ತದ ತಳಿಗಳ ಮುಖ್ಯವಾದ ಗುಣಲಕ್ಷಣಗಳನ್ನು ಇಲ್ಲಿ ವಿವರಿಸಿಕೊಡಲಾಗಿದೆ.
ದೀರ್ಘಾವಧಿ ತಳಿಗಳು
ಬಿ.ಆರ್-2655: ಈ ತಳಿಯನ್ನು ಬಾಂಗ್ಲಾದೇಶದಿಂದ ಆಮದು ಮಾಡಿಕೊಂಡ ಬಿ.ಆರ್.2655-9-1-1-2 ಎಂಬ ತಳಿಯೊಂದರಿಂದ ಪುನರಾಯ್ಕೆ ಮಾಡಿ ಅಭಿವೃದ್ಧಿಪಡಿಸಲಾಗಿದೆ. 140 ರಿಂದ 145 ದಿನಗಳಲ್ಲಿ ಕೊಯ್ಲಿಗೆ ಸಿದ್ದವಾಗುವ ಈ ತಳಿಯ ಸಸಿಮಡಿ ತಯಾರು ಮಾಡಲು ಜೂನ್ ತಿಂಗಳ ಕೊನೆಯ ವಾರ ಅತ್ಯಂತ ಸೂಕ್ತ ಕಾಲ. ಜಯ ತಳಿಗಿಂತ ಎತ್ತರವಾಗಿ ಬೆಳೆಯುವ ಈ ತಳಿಯು ಗೊನೆ ಬಾಗಿದ ನಂತರವೂ ಕೆಳಗೆ ಬೀಳುವುದಿಲ್ಲ (ಓoಟಿ-ಟoಜgiಟಿg). ಭತ್ತವು ಮಧ್ಯಮ ವರ್ಗಕ್ಕೆ ಸೇರಿದ್ದು ಗಿರಣಿಯಲ್ಲಿ ಹೆಚ್ಚಿನ ಅಕ್ಕಿಯ ಇಳುವರಿ ನೀಡುತ್ತದೆ. ಈ ತಳಿಯು ಬೆಂಕಿ ರೋಗಕ್ಕೆ ಸಹಿಷ್ಣುತಾ ಶಕ್ತಿ ಹೊಂದಿದೆ. ಆದುದರಿಂದ ಪ್ರತಿ ವರ್ಷವೂ ಬೆಂಕಿ ರೋಗ ಕಂಡುಬರುವ ಪ್ರದೇಶಗಳಿಗೆ ಇದು ಅತ್ಯಂತ ಸೂಕ್ತವಾದುದು. ಉತ್ತಮ ಬೆಳೆಯೊಂದರಿಂದ ಎಕರೆಗೆ 30 ರಿಂದ 35 ಕ್ವಿಂಟಾಲ್ ಇಳುವರಿ ಪಡೆಯಬಹುದು.
ಐ.ಇ.ಟಿ-8116: ಸೋನಾ ಮತ್ತು ಆಂಡ್ರೋಸಾಲಿ ತಳಿಗಳ ಸಂಕರಣದಿಂದ ಅಭಿವೃದ್ಧಿ ಪಡಿಸಲಾಗಿರುವ ಈ ತಳಿಯು ಕಂದು ಜಿಗಿ ಹುಳುವಿಗೆ (ಬಿ.ಪಿ.ಹೆಚ್) ನಿರೋಧಕ ಶಕ್ತಿಯನ್ನು ಹೊಂದಿದೆ. ಆದುದರಿಂದ ಕಂದು ಜಿಗಿ ಹುಳುವಿನ ಬಾಧೆ ಕಂಡುಬರುವ ಪ್ರದೇಶಗಳಿಗೆ ಈ ತಳಿಯು ಅತ್ಯಂತ ಸೂಕ್ತವಾದುದು. ಜಯ ಭತ್ತದಂತೆ ದಪ್ಪಕಾಳನ್ನು ಹೊಂದಿರುವ ಇದು ಜಯಕ್ಕಿಂತ ಸ್ವಲ್ಪ ಎತ್ತರ ಬೆಳೆಯುತ್ತದೆ. 140 ದಿನಗಳಲ್ಲಿ ಕಟಾವಿಗೆ ಬರುವ ಈ ತಳಿಯ ಬಿತ್ತನೆಗೆ ಜೂನ್ ತಿಂಗಳು ಅತ್ಯಂತ ಸೂಕ್ತವಾದುದು. ಎಕರೆಗೆ 30 ರಿಂದ 35 ಕ್ವಿಂಟಾಲ್ ಕಾಳಿನ ಇಳುವರಿ ನೀಡುವ ಇದು ಹೆಚ್ಚಿನ ಹುಲ್ಲನ್ನೂ ಕೊಡುತ್ತದೆ.
ಜಯ: ಈ ತಳಿಯನ್ನು ಟಿ.ಎನ್-1 ಮತ್ತು ಟಿ-141 ತಳಿಗಳ ಸಂಕರಣದಿಂದ ಉತ್ಪಾದಿಸಲಾಗಿದೆ. 140 ರಿಂದ 145 ದಿನಗಳಲ್ಲಿ ಕೊಯ್ಲಿಗೆ ಸಿದ್ಧವಾಗುವ ಈ ತಳಿಯನ್ನು ಜೂನ್ ತಿಂಗಳ ಕೊನೆಯ ವಾರದಲ್ಲಿ ಬಿತ್ತನೆ ಮಾಡಿ ಜುಲೈ ತಿಂಗಳ ಮೂರನೇ ವಾರದೊಳಗೆ ನಾಟಿ ಮಾಡುವುದು ಸೂಕ್ತ. ಬಿತ್ತನೆ ಹಾಗೂ ನಾಟಿಯ ಮುಂದೂಡುವಿಕೆ ಇಳುವರಿಯ ಮೇಲೆ ಪ್ರತಿಕೂಲ ಪರಿಣಾಮ ಉಂಟುಮಾಡುತ್ತದೆ. ಮುಂಗಾರು ಹಂಗಾಮಿನಲ್ಲಿ ಬೆಂಕಿರೋಗ ಹಾಗೂ ಕಂದು ಜಿಗಿ ಹುಳುವಿನ ಭಾಧೆಗೆ ತುತ್ತಾಗುವ ಈ ತಳಿಯು ಬೇಸಿಗೆ ಹಂಗಾಮಿಗೆ ಹೆಚ್ಚು ಸೂಕ್ತವಾದುದು. ಈ ತಳಿಯ ಪೈರು ಗಿಡ್ಡವಾಗಿದ್ದು ಕಾಳು ದಪ್ಪವಾಗಿರುತ್ತದೆ. ಎಕರೆಗೆ 30 ರಿಂದ 32 ಕ್ವಿಂಟಾಲ್ ಇಳುವರಿ ಸಾಮಥ್ರ್ಯ ಹೊಂದಿರುವ ಈ ತಳಿಯು ಎಲ್ಲಾ ಪ್ರದೇಶಗಳಿಗೂ ಹೊಂದಿಕೊಂಡು ಬೆಳೆಯುವ ವಿಶೇಷ ಗುಣ ಹೊಂದಿದೆ.
ಅಲ್ಪಾವಧಿ ತಳಿಗಳು
ಎಂ.ಟಿ.ಯು-1010: ಬಿತ್ತನೆಯಿಂದ ಕೊಯ್ಲಿಗೆ 120 ರಿಂದ 125 ದಿನಗಳನ್ನು ತೆಗೆದುಕೊಳ್ಳುವ ಈ ತಳಿಯ ಕಾಳುಗಳು ಸಣ್ಣದಾಗಿ ಉದ್ದವಾಗಿರುತ್ತದೆ. ಸುಮಾರು ಎರಡರಿಂದ ಎರಡುವರೆ ಅಡಿ ಎತ್ತರ ಬೆಳೆಯುವ ಇದು ಕಡಿಮೆ ನೀರಿನ ಲಭ್ಯತೆಯಲ್ಲಿ ಬೆಳೆಯಲು ಹೆಚ್ಚು ಅನುಕೂಲ. ಭತ್ತವು ಹೆಚ್ಚು ಮಾಗಿದರೆ ಕಾಳು ಉದುರುತ್ತದೆ. ಆದ್ದರಿಂದ ಪ್ರತಿ ಗೊನೆಯ ತಳಭಾಗದ ಕಾಳು ಇನ್ನೂ ಸ್ವಲ್ಪ ಹಸಿರಾಗಿರುವಾಗಲೆ ಕಟಾವು ಮಾಡಬೇಕು. ಉತ್ತಮ ಬೆಳೆಯೊಂದರಿಂದ ಎಕರೆಗೆ 24 ರಿಂದ 26 ಕ್ವಿಂಟಾಲ್ ಇಳುವರಿ ಪಡೆಯಬಹುದು.
ಜ್ಯೋತಿ: ಈ ತಳಿಯು 120 ರಿಂದ 125 ದಿನಗಳಲ್ಲಿ ಕಟಾವಿಗೆ ಬರುವ ಒಂದು ಅಲ್ಪಾವಧಿ ತಳಿ. ಭತ್ತವು ದಪ್ಪವಾಗಿ ಉದ್ದವಾಗಿದ್ದು ಅಕ್ಕಿಯು ಕೆಂಪಗಿರುತ್ತದೆ. ಮುಂಗಾರಿನಲ್ಲಿ ಜುಲೈ ಕೊನೆಯವರೆಗೂ ಉಪಯೋಗಿಸಬಹುದು. ಈ ತಳಿಯು ಊದುಭತ್ತ ರೋಗ, ದುಂಡಾಣು ರೋಗ ಹಾಗೂ ಎಲೆ ಕವಚ ಕೊಳೆ ರೋಗಗಳಿಗೆ ಸುಲಭವಾಗಿ ತುತ್ತಾಗುತ್ತದೆ. ಆದುದರಿಂದ ರೈತರು ಈ ಬಗ್ಗೆ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಅತೀ ಅವಶ್ಯಕ. ಉತ್ತಮ ಬೆಳೆಯೊಂದರಿಂದ ಎಕರೆಗೆ 18 ರಿಂದ 20 ಕ್ವಿಂಟಾಲ್ ಇಳುವರಿ ಪಡೆಯಬಹುದು.
ತೆಲ್ಲಹಂಸ: ಈ ತಳಿಯು ಸಹ 120 ರಿಂದ 125 ದಿನಗಳಲ್ಲಿ ಕಟಾವಿಗೆ ಬರುವ ಒಂದು ಅಲ್ಪಾವಧಿ ತಳಿಯಾಗಿದ್ದು ಅಕ್ಕಿಯು ಬೆಳ್ಳಗಿರುತ್ತದೆ. ಕೆರೆ ಅಚ್ಚುಕಟ್ಟು ಪ್ರದೇಶಗಳಿಗೆ ಸೂಕ್ತವಾದ ಈ ತಳಿಯ ಭತ್ತವು ಮಧ್ಯಮ ಸಣ್ಣದಾಗಿದ್ದು ಊಟಕ್ಕೆ ಹೆಚ್ಚು ರುಚಿಯಾಗಿರುತ್ತದೆ. ಎಕರೆಗೆ 18 ರಿಂದ 20 ಕ್ವಿಂಟಾಲ್ಗಳವರೆಗೂ ಇಳುವರಿ ನೀಡುವ ಈ ತಳಿಯನ್ನು ಜುಲೈ ಕೊನೆಯವರೆಗೂ ಬಿತ್ತನೆ ಮಾಡಬಹುದು.
ರಾಶಿ: ರಾಷ್ಟ್ರಮಟ್ಟದಲ್ಲಿ ಐ.ಇ.ಟಿ-1444 ಮತ್ತು ಪ್ರಾದೇಶಿಕವಾಗಿ ಭರಣಿ ಎಂಬ ಹೆಸರುಗಳಿಂದ ಪ್ರಸಿದ್ಧಿಯಾಗಿರುವ ಈ ತಳಿಯನ್ನು ಟಿ.ಎನ್-1 ಮತ್ತು ಸಿಓ-29 ಎಂಬ ತಳಿಗಳ ಸಂಕರಣದಿಂದ ಆಬಿವೃದ್ಧಿ ಪಡಿಸಲಾಗಿದೆ. 120 ರಿಂದ 125 ದಿನಗಳಲ್ಲಿ ಕಟಾವಿಗೆ ಬರುವ ಈ ತಳಿಯು ಬರ ನಿರೋಧಕ ಶಕ್ತಿಯನ್ನು ಹೊಂದಿದೆ. ಆದುದರಿಂದ ನೀರಿನ ತೊಂದರೆ ಇರುವ ಕಾಲುವೆಯ ಕೊನೇ ಪ್ರದೇಶಗಳಿಗೆ ಹಾಗೂ ಪುಣಜಿ ಬೇಸಾಯಕ್ಕೆ ಇದು ಅತ್ಯಂತ ಸೂಕ್ತ ತಳಿ. ಕಾಳು ಮಧ್ಯಮ ದಪ್ಪವಾಗಿದ್ದು ಎಕರೆಗೆ 22 ರಿಂದ 24 ಕ್ವಿಂಟಾಲ್ ಇಳುವರಿ ಸಾಮಥ್ರ್ಯ ಪಡೆದಿದೆ.
ಮಂಗಳ: ಇದು ಒಂದು ಅತ್ಯಂತ ಅಲ್ಪಾವಧಿ ತಳಿ, 110 ರಿಂದ 115 ದಿನಗಳಲ್ಲಿ ಕೊಯ್ಲಿಗೆ ಸಿದ್ದವಾಗುತ್ತದೆ. ತುಂಬಾ ಬೇಗ ಕಟಾವಿಗೆ ಬರುವುದರಿಂದ ನೀರಿನ ಲಭ್ಯತೆ ಕಡಿಮೆ ಇರುವ ಪ್ರದೇಶಗಳಲ್ಲಿ ವಿಶೇಷವಾಗಿ ಕೆರೆ ಆಶ್ರಯಗಳಲ್ಲಿ ಮತ್ತು ಬೇಸಿಗೆ ಹಂಗಾಮಿನಲ್ಲಿ ಬೆಳೆಯಲು ಇದು ಅತ್ಯಂತ ಸೂಕ್ತ ತಳಿ. ಸ್ವಲ್ಪ ಮಟ್ಟಿಗೆ ಚಳಿ ಹಾಗೂ ಚೌಳು ನಿರೋಧಕ ಶಕ್ತಿಯನ್ನೂ ಹೊಂದಿದೆ. ಮುಂಗಾರಿನಲ್ಲಿ ಆಗಸ್ಟ್ ತಿಂಗಳ ಎರಡನೇ ವಾರದಲ್ಲಿ ಒಟ್ಲು ಹಾಕಿ ಸೆಪ್ಟಂಬರ್ ಮೊದಲ ವಾರದೊಳಗೆ ನಾಟಿ ಮಾಡಬೇಕು. ಈ ತಳಿಯ ಕಾಳುಗಳು ಮಧ್ಯಮ ದಪ್ಪವಾಗಿದ್ದು ಉತ್ತಮ ನಿರ್ವಹಣೆಯಲ್ಲಿ ಎಕರೆಗೆ 16 ರಿಂದ 18 ಕ್ವಿಂಟಾಲ್ ಇಳುವರಿ ಕೊಡುತ್ತದೆ.
ರಕ್ಷಾ : ವಿ.ಸಿ.ಫಾರಂನ ವಲಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ಅಭಿವೃದ್ಧಿಪಡಿಸಲಾಗಿರುವ ಈ ತಳಿಯು 110-115 ದಿನಗಳಲ್ಲಿ ಕಟಾವಿಗೆ ಸಿದ್ದವಾಗುತ್ತದೆ. ಇದನ್ನು ಮುಂಗಾರಿನಲ್ಲಿ ಆಗಸ್ಟ್ ತಿಂಗಳ ಕೊನೆಯವರೆಗೂ ಮತ್ತು ಬೇಸಿಗೆಯಲ್ಲಿ ಫೆಬ್ರವರಿ ಮೊದಲ ವಾರದವರೆಗೂ ಬಿತ್ತನೆ ಮಾಡಬಹುದು. ಬೆಂಕಿರೋಗಕ್ಕೆ ಸಹಿಷ್ಣತೆ ಹೊಂದಿರುವ ಈ ತಳಿಯ ಕಾಳುಗಳು ಸಣ್ಣದಾಗಿದ್ದು, ಉತ್ತಮ ಗುಣಮಟ್ಟದಿಂದ ಕೂಡಿದೆ. ನೀರಾವರಿ ಲಭ್ಯತೆ ಕಡಿಮೆ ಇರುವ ಕಾಲುವೆ ಕೊನೆ ಭಾಗಗಳು, ಬಾವಿ ನೀರಾವರಿ ಪ್ರದೇಶಗಳು ಹಾಗೂ ಕೆರೆ ಅಚ್ಚುಕಟ್ಟು ಪ್ರದೇಶಗಳಿಗೆ ಈ ತಳಿಯು ಹೆಚ್ಚು ಅನುಕೂಲ. ಮಧ್ಯಮ ಎತ್ತರ ಬೆಳೆಯುವ ಉತ್ತಮ ಬೆಳೆಯೊಂದರಿಂದ ಎಕರೆಗೆ 22-24 ಕ್ವಿಂಟಾಲ್ ಇಳುವರಿ ಪಡೆಯಬಹುದು.
ಮಧ್ಯಮಾವಧಿ ತಳಿಗಳು
ತನು: ಈ ತಳಿಯನ್ನು ಮಂಡ್ಯ ವಿಜಯ ಮತ್ತು ಬಿಳಿಮುಕ್ತಿ ತಳಿಗಳನ್ನು ಉಪಯೋಗಿಸಿಕೊಂಡು ಅಭಿವೃದ್ಧಿಪಡಿಸಲಾಗಿದೆ. ಮಸ್ಸೂರಿ ಭತ್ತದಂತೆ ಉತ್ಕೃಷ್ಟ ಅಕ್ಕಿಯ ಗುಣ ಹೊಂದಿರುವ ಈ ತಳಿ 130 ರಿಂದ 135 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಈ ತಳಿಯ ಸಸಿಮಡಿ ಬಿತ್ತನೆಗೆ ಜುಲೈ ಎರಡನೇ ವಾರ ಅತ್ಯಂತ ಸೂಕ್ತವಾದುದು. ಆಕರ್ಷಕ ಬಣ್ಣ ಹೊಂದಿರುವ ಇದು ಮಧ್ಯಮ ಎತ್ತರದಿಂದ ಕೂಡಿದ್ದು ಅಧಿಕ ಧಾನ್ಯ ಮತ್ತು ಹುಲ್ಲಿನ ಇಳುವರಿ ನೀಡುತ್ತದೆ. ಉತ್ತಮ ಬೆಳೆಯೊಂದರಿಂದ ಎಕರೆಗೆ 26 ರಿಂದ 28 ಕ್ವಿಂಟಾಲ್ ಇಳುವರಿ ಪಡೆಯಬಹುದು.
ಎಂ.ಟಿ.ಯು-1001: ವಿಜೇತ ಎಂದು ಕರೆಯಲ್ಪಡುವ ಈ ತಳಿಯೂ ಸಹ 130 ರಿಂದ 135 ದಿನಗಳಲ್ಲಿ ಕೊಯ್ಲಿಗೆ ಸಿದ್ಧವಾಗುತ್ತದೆ. ಈ ತಳಿಯ ಸಸಿಮಡಿ ಬಿತ್ತನೆಗೆ ಜುಲೈ ಎರಡನೇ ವಾರ ಅತ್ಯಂತ ಸೂಕ್ತವಾದುದು. ಮಧ್ಯಮ ಎತ್ತರದ ಈ ತಳಿಯು ಕಂದು ಜಿಗಿ ಹುಳುವಿಗೆ ಸಹಿಷ್ಣತೆ ಹೊಂದಿದೆ. ಇದರ ಕಾಳು ದಪ್ಪವಾಗಿದ್ದು ಎಕರೆಗೆ 28 ರಿಂದ 30 ಕ್ವಿಂಟಾಲ್ ಇಳುವರಿ ಸಾಮಥ್ರ್ಯ ಹೊಂದಿದೆ.
ವಿಕಾಸ್: ಈ ತಳಿಯೂ ಸಹ ಬಿತ್ತನೆಯಿಂದ ಕಟಾವಿಗೆ 130 ರಿಂದ 135 ದಿನಗಳನ್ನು ತೆಗೆದುಕೊಳ್ಳುತ್ತದೆ. ಸಸಿಮಡಿ ಬಿತ್ತನೆಗೆ ಜುಲೈ ಎರಡನೇ ವಾರ ಅತ್ಯಂತ ಸೂಕ್ತ. ಮದ್ಯಮ ಎತ್ತರ ಬೆಳೆಯುವ, ಉದ್ದವಾದ ಸಣ್ಣ ಕಾಳಿನ ಗುಣ ಹೊಂದಿರುವ ಈ ತಳಿಯು ಚೌಳು ಮತ್ತು ಕರಲು ಮಣ್ಣಿಗೆ ಸಹಿಷ್ಣುತೆಯನ್ನು ಹೊಂದಿದೆ. ಆದುದರಿಂದ ಇದನ್ನು ಚೌಳು ಮತ್ತು ಕರಲು ಮಣ್ಣಿನ ಪ್ರದೇಶಗಳಲ್ಲಿ ಯಶಸ್ವಿಯಾಗಿ ಬೆಳೆಯಬಹುದು. ಉತ್ತಮ ಬೆಳೆಯೊಂದರಿಂದ ಆರೋಗ್ಯವಂತ ಮಣ್ಣಿನಲ್ಲಿ ಎಕರೆಗೆ 24 ರಿಂದ 26 ಹಾಗೂ ಚೌಳು ಮತ್ತು ಕರಲು ಮಣ್ಣಿನಲ್ಲಿ 14 ರಿಂದ 16 ಕ್ವಿಂಟಾಲ್ ಇಳುವರಿ ಪಡೆಯಬಹುದು.
ಐ.ಆರ್-30864: ಇದನ್ನು ಐ.ಆರ್-1738, ಐ.ಆರ್-7801, ಐ.ಆರ್-46 ಮತ್ತು ಕವಾಲೊ ಎಂಬ ನಾಲ್ಕು ವಿವಿಧ ತಳಿಗಳ ಸಂಕರಣದಿಂದ ಪಡೆಯಲಾಗಿದೆ. 130 ರಿಂದ 135 ದಿನಗಳಲ್ಲಿ ಕಟಾವಿಗೆ ಸಿದ್ಧವಾಗುವ ಈ ತಳಿಯ ಸಸಿಮಡಿ ಬಿತ್ತನೆಗೆ ಜುಲೈ ಎರಡನೇ ವಾರ ಅತ್ಯಂತ ಸೂಕ್ತವಾದುದು. ಈ ತಳಿಯು ಚೌಳು ನಿರೋಧಕತೆ ಹೊಂದಿರುವುದರಿಂದ ಚೌಳು ಭೂಮಿಯಲ್ಲಿ ಬೆಳೆಯಲು ಅತ್ಯಂತ ಸೂಕ್ತವಾಗಿದೆ. ಇದರ ಕಾಳು ಮಧ್ಯಮ ಸಣ್ಣದಾಗಿದ್ದು ಗಿರಣಿಯಲ್ಲಿ ಉತ್ತಮ ಅಕ್ಕಿಯ ಅಧಿಕ ಇಳುವರಿ ಸಿಗುತ್ತದೆ ಹಾಗೂ ಈ ತಳಿಯ ಅಕ್ಕಿಯು ಅನ್ನ ಮಾಡಲು ಅತ್ಯಂತ ಸೂಕ್ತವಾಗಿದೆ. ಉತ್ತಮ ಬೆಳೆಯೊಂದರಿಂದ ಎಕರೆಗೆ 28 ರಿಂದ 30 ಕ್ವಿಂಟಾಲ್ ಇಳುವರಿ ಪಡೆಯಬಹುದು.
ಐ.ಆರ್-20: 130 ರಿಂದ 135 ದಿನಗಳಲ್ಲಿ ಕೊಯ್ಲಿಗೆ ಬರುವ ಈ ತಳಿಯನ್ನು ಐ.ಆರ್-26 ಮತ್ತು ಟಿ.ಕೆ.ಎಂ-6 ತಳಿಗಳನ್ನು ಉಪಯೋಗಿಸಿ ಅಭಿವೃದ್ಧಿ ಪಡಿಸಲಾಗಿದೆ. ಜುಲೈ ತಿಂಗಳ ಎರಡನೇ ವಾರದವರೆಗೂ ಬಿತ್ತನ ಮಾಡಬಹುದಾದ ಈ ತಳಿಯು ಜಯ ಮತ್ತು ವಿಕಾಸ್ ತಳಿಯಂತೆ ಗಿಡ್ಡವಾಗಿರುತ್ತದೆ. ಮಧ್ಯಮ ಸಣ್ಣ ಗಾತ್ರದ ಕಾಳನ್ನು ಹೊಂದಿರುವ ಇದು ಅನ್ನ ಮಾಡಲು ಅತ್ಯಂತ ಸೂಕ್ತವಾಗಿದ್ದು ಗಿರಣಿಯಲ್ಲಿ ಹೆಚ್ಚು ನುಚ್ಚಾಗುವುದಿಲ್ಲ. ಈ ತಳಿಯ ಉತ್ತಮ ಬೆಳೆಯೊಂದರಿಂದ ಎಕರೆಗೆ 24 ರಿಂದ 26 ಕ್ವಿಂಟಾಲ್ ಕಾಳಿನ ಇಳುವರಿ ಪಡೆಯಬಹುದು.
ಐ.ಆರ್-64: ಫಿಲಿಫೈನ್ಸ್ ದೇಶದಲ್ಲಿರುವ ಅಂತರರಾಷ್ಟ್ರೀಯ ಭತ್ತದ ಸಂಶೋಧನಾ ಸಂಸ್ಥೆಯಲ್ಲಿ ಅಭಿವೃದ್ಧಿ ಪಡಿಸಲಾಗಿರುವ ಇದು ಒಂದು ಅಂತರರಾಷ್ಟ್ರೀಯ ಭತ್ತದ ತಳಿ. 125-130 ದಿನಗಳಲ್ಲಿ ಕಟಾವಿಗೆ ಸಿದ್ಧವಾಗುವ ಈ ತಳಿಯನ್ನು ಮುಂಗಾರು ಹಂಗಾಮಿನಲ್ಲಿ ಜುಲೈ ಎರಡನೇ ವಾರದವರೆಗೂ ಬಿತ್ತನೆ ಮಾಡಬಹುದು. ಈ ತಳಿಯ ಕಾಳು ಮಧ್ಯಮ ಗಾತ್ರದಿಂದ ಕೂಡಿದ್ದು ಉದ್ದವಾಗಿರುತ್ತದೆ. ಈ ತಳಿಗೆ ಬೆಂಕಿ ರೋಗದ ಬಾಧೆ ಕಂಡುಬರುವುದರಿಂದ ರೈತರು ಇದರ ಬಗೆಗೆ ವಿಶೇಷ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ. ಉತ್ತಮ ಬೆಳೆಯೊಂದರಿಂದ ಎಕರೆಗೆ 24 ರಿಂದ 26 ಕ್ವಿಂಟಾಲ್ಗಳಷ್ಟು ಕಾಳಿನ ಇಳುವರಿ ಪಡೆಯಬಹುದು.
ಕೆ.ಸಿ.ಪಿ-1 : ಈ ತಳಿಯು 130-135 ದಿನಗಳಲ್ಲಿ ಕಟಾವಿಗೆ ಸಿದ್ದವಾಗುತ್ತದೆ. ಈ ತಳಿಯನ್ನು ಜುಲೈ ತಿಂಗಳ ಎರಡನೇ ವಾರದಲ್ಲಿ ಬಿತ್ತನೆ ಮಾಡಿ ಆಗಸ್ಟ್ ತಿಂಗಳ ಎರಡನೇ ವಾರದೊಳಗೆ ನಾಟಿ ಮಾಡುವುದು ಸೂಕ್ತ. ಬೇಸಿಗೆ ಹಂಗಾಮಿನಲ್ಲಿ ಈ ತಳಿಯನ್ನು ಬಿತ್ತನೆ ಮಾಡಲು ಜನವರಿ 2 ನೇ ವಾರ ಅತ್ಯಂತ ಸೂಕ್ತವಾದದ್ದು, ಭತ್ತವು ದಪ್ಪವಾಗಿದ್ದು, ಜಯ ತಳಿಯನ್ನು ಹೊಲುತ್ತದೆ. ಗಿಡವು ಎತ್ತರವಾಗಿ ಬೆಳೆಯುವುದರಿಂದ ಸಾರಜನಕದ ಗೊಬ್ಬರವನ್ನು ಶಿಫಾರಸ್ಸಿಗಿಂತ ಹೆಚ್ಚು ಬಳಸಬಾರದು. ಉತ್ತಮ ಬೆಳೆಯೊಂದರಿಂದ ಎಕರೆಗೆ 26-28 ಕ್ವಿಂಟಾಲ್ ಇಳುವರಿ ಪಡೆಯಬಹುದಾಗಿದೆ.
ಚಳಿ ನಿರೋಧಕ ತಳಿಗಳು
ಭತ್ತವು ಹೂ ಬಿಡುವ ಸಂದರ್ಭದಲ್ಲಿ ಚಳಿ ಹೆಚ್ಚಾಗಿ ವಾತಾವರಣದಲ್ಲಿನ ಉಷ್ಣಾಂಶವು ಕಡಿಮೆಯಾದರೂ ಸಹಜ ಪರಾಗಸ್ಪರ್ಶ ಕ್ರಿಯೆಯೊಡನೆ ಉತ್ತಮ ಕಾಳಿನ ಇಳುವರಿ ನೀಡುವ ತಳಿಗಳನ್ನು ಚಳಿ ನಿರೋಧಕ ತಳಿಗಳೆಂದು ಕರೆಯಲಾಗುತ್ತದೆ. ಪ್ರಸ್ತುತ ಕರ್ನಾಟಕದ ದಕ್ಷಿಣ ಪ್ರದೇಶಗಳಿಗೆ ಎರಡು ಚಳಿ ನಿರೋಧಕ ತಳಿಗಳನ್ನು ಬಿಡುಗಡೆ ಮಾಡಲಾಗಿದೆ.
ಮುಕ್ತಿ (ಸಿ.ಟಿ.ಹೆಚ್-1): ಇದನ್ನು ಎಸ್.ಐ.ರೆನ್ಹ ಮೆಹ್ರಾ ಮತ್ತು ಐ.ಆರ್-2153 ತಳಿಗಳನ್ನು ಬಳಸಿ ಅಭಿವೃದ್ಧಿಪಡಿಸಲಾಗಿದೆ. ಈ ತಳಿಯ ಕಾಳು ದಪ್ಪವಾಗಿದ್ದು ಅಕ್ಕಿಯು ಕೆಂಪಾಗಿರುತ್ತದೆ. 125 ರಿಂದ 130 ದಿನಗಳಲ್ಲಿ ಕೊಯ್ಲಿಗೆ ಬರುವ ಈ ತಳಿಯನ್ನು ಆಗಸ್ಟ್ ಕೊನೆಯವರೆಗೂ ಬಿತ್ತನೆ ಮಾಡಿ ಸೆಪ್ಟಂಬರ್ ಕೊನೆಯವರೆಗೂ ನಾಟಿ ಮಾಡಬಹುದು. ಇದು ಎಕರೆಗೆ 18 ರಿಂದ 20 ಕ್ವಿಂಟಾಲ್ ಇಳುವರಿ ನೀಡುತ್ತದೆ.
ಬಿಳಿಮುಕ್ತಿ (ಸಿ.ಟಿ.ಹೆಚ್-3): ಮುಕ್ತಿ ತಳಿಯಿಂದ ಪುನರಾಯ್ಕೆ ಮಾಡಲ್ಪಟ್ಟಿರುವ ಈ ತಳಿಯು 120 ರಿಂದ 125 ದಿನಗಳಲ್ಲಿ ಕೊಯ್ಲಿಗೆ ಸಿದ್ದವಾಗುತ್ತದೆ. ಇದು ಮುಕ್ತಿ ತಳಿಗಿಂತ ಸ್ವಲ್ಪ ಕಡಿಮೆ ಎತ್ತರ ಬೆಳೆಯುತ್ತದೆ. ಕಾಳು ಮುಕ್ತಿ ಭತ್ತದಂತೆ ದಪ್ಪವಾಗಿರುತ್ತದೆಯಾದರೂ ಅಕ್ಕಿ ಬೆಳ್ಳಗಿರುತ್ತದೆ. ಆಗಸ್ಟ್ ತಿಂಗಳ ಕೊನೆಯವರೆಗೂ ಬಿತ್ತನೆ ಮಾಡಿ ಸೆಪ್ಟಂಬರ್ ಕೊನೆಯವರೆಗೆ ನಾಟಿ ಮಾಡಬಹುದು. ಎಕರೆಗೆ 20 ಕ್ವಿಂಟಾಲ್ ಗಳವರೆಗೂ ಇಳುವರಿ ಸಾಮಥ್ರ್ಯ ಹೊಂದಿರುವ ಈ ತಳಿಯನ್ನು ತಡವಾದ ಮುಂಗಾರಿನಲ್ಲಿ ಮುಕ್ತಿ ತಳಿಯ ಬದಲಿಗೆ ಉಪಯೋಗಿಸಬಹುದು.
ಹೈಬ್ರಿಡ್ ತಳಿಗಳು
ಕೆ.ಆರ್.ಹೆಚ್-2: ಈ ತಳಿಯನ್ನು ಐ.ಆರ್-58025 ಎ ಮತ್ತು ಕೆ.ಎಂ.ಆರ್-3ಆರ್ ಎಂಬ ತಳಿಗಳ ಸಂಕರಣದಿಂದ ಉತ್ಪಾದನೆ ಮಾಡಲಾಗುತ್ತದೆ. 130-135 ದಿನಗಳಲ್ಲಿ ಕಟಾವಿಗೆ ಸಿದ್ದವಾಗುವ ಈ ಹೈಬ್ರಿಡ್ ತಳಿಯು ಎಕರೆಗೆ ಸರಾಸರಿ 35-40 ಕ್ವಿಂಟಾಲ್ ಇಳುವರಿ ಕೊಡುವ ಸಾಮಥ್ರ್ಯ ಹೊಂದಿದೆ. ಜಯ ತಳಿಗಿಂತ ಹೆಚ್ಚು ಎತ್ತರ ಬೆಳೆಯುವುದರಿಂದ ಅಧಿಕ ಹುಲ್ಲನ್ನೂ ಸಹ ಕೊಡುವ ಈ ಹೈಬ್ರಿಡ್ ಭತ್ತಕ್ಕೆ ಬೆಂಕಿ ರೋಗದ ಬಾಧೆಯೂ ಕಡಿಮೆ.
ಕೆ.ಆರ್.ಹೆಚ್-4: ಈ ತಳಿಯು ಸಂಕರಣ ತಳಿಯಾಗಿದ್ದು ವಿ.ಸಿ.ಫಾರಂನ ವಲಯ ಕೃಷಿ ಸಂಶೋಧನಾ ಕೇಂದ್ರದಿಂದ ಅಭಿವೃದ್ಧಿ ಪಡಿಸಲಾಗಿದೆ. ಈ ಸಂಕರಣ ತಳಿಯು 130-135 ದಿನಗಳಲ್ಲಿ ಕಟಾವಿಗೆ ಸಿದ್ದವಾಗುತ್ತದೆ. ಈ ತಳಿಯ ಸಸಿಮಡಿ ಬಿತ್ತನೆಗೆ ಜುಲೈ ಎರಡನೇ ವಾರ ಅತ್ಯಂತ ಸೂಕ್ತವಾದುದು. ಬೇಸಿಗೆ ಹಂಗಾಮಿನಲ್ಲಿ ಈ ತಳಿಯನ್ನು ಬಿತ್ತನೆ ಮಾಡಲು ಜನವರಿ 2 ನೇ ವಾರ ಅತ್ಯಂತ ಸೂಕ್ತವಾದದ್ದು. ಈ ತಳಿಯ ಕಾಳು ಮಧ್ಯಮ ಸಣ್ಣದಾಗಿದ್ದು, ಅಕ್ಕಿಯು ಅನ್ನ ಮಾಡಲು ಅತ್ಯಂತ ಸೂಕ್ತವಾಗಿದೆ. ಈ ಸಂಕರಣ ತಳಿಯು ಎಕರೆಗೆ 34-36 ಕ್ವಿಂಟಾಲ್ ಇಳುವರಿ ಸಾಮರ್ಥ್ಯ ಹೊಂದಿದೆ.
ಮೇಲೆ ತಿಳಿಸಿರುವ ಎಲ್ಲಾ ತಳಿಗಳು ಮತ್ತು ಹೈಬ್ರಿಡ್ ಭತ್ತವನ್ನು ಬೇಸಿಗೆ ಹಂಗಾಮಿನಲ್ಲಿಯೂ ಬೆಳೆಯಬಹುದು. ರೈತರು ತಮಗೆ ದೊರೆಯುವ ನೀರಿನ ಪ್ರಮಾಣ ಹಾಗೂ ಮುಂಗಾರು ಹಂಗಾಮಿನ ಬೆಳೆ ಯೋಜನೆಯನ್ನು ಗಮನದಲ್ಲಿಟ್ಟುಕೊಂಡು ಅದಕ್ಕೆ ಅನುಸಾರವಾಗಿ ಸೂಕ್ತ ಅವಧಿಯ ತಳಿಯನ್ನು ಆಯ್ಕೆ ಮಾಡಿಕೊಂಡು ಬೆಳೆಯಬೇಕು.ಜನವರಿ 3 ಮತ್ತು 4ನೇ ವಾರ ಸಸಿಮಡಿ ತಯಾರಿಕೆಗೆ ಹಾಗೂ ಫೆಬ್ರವರಿ 2 ಮತ್ತು 3ನೇ ವಾರ ನಾಟಿ ಮಾಡಲು ಸೂಕ್ತ ಕಾಲ. ಸಾಮಾನ್ಯವಾಗಿ ಬೇಸಿಗೆ ಬೆಳೆಯಲ್ಲಿ ಎಲ್ಲಾ ತಳಿಗಳು 8-10 ದಿನ ತಡವಾಗಿ ಕೊಯ್ಲಿಗೆ ಬರುತ್ತವೆ.
*********************